ದಾವಣಗೆರೆ ನಗರವು – ಕರ್ನಾಟಕ ರಾಜ್ಯದ ಮಧ್ಯ ಭಾಗದಲ್ಲಿದೆ. ರಾಜ್ಯದ ರಾಜಧಾನಿಯಾದ ಬೆಂಗಳೂರುನಿಂದ 265 ಕಿ.ಮಿ. ದೂರದಲ್ಲಿರುವ ಈ ಜಿಲ್ಲಾ ಆಡಳಿತ ಕೇಂದ್ರವು ರಾಷ್ಟ್ರೀಯ ಹೆದ್ದಾರಿ – 4ರಲ್ಲಿದೆ. ದಾವಣಗೆರೆ ನಗರವು 1997ರ ತನಕ ಚಿತ್ರದುರ್ಗ ಜಿಲ್ಲೆಯ ಭಾಗವಾಗಿದ್ದು, ತದನಂತರ ರಾಜ್ಯ ಸರ್ಕಾರವು ಇದನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಿಸಿದೆ. ಈ ಜಿಲ್ಲೆಯನ್ನು “ಬಯಲು ಸೀಮೆ”ಯ ಅಥವಾ “ಮೈದಾನ” ಪ್ರದೇಶವೆಂದು ಗುರುತಿಸಿದೆ.
ಈ ಜಿಲ್ಲೆಯ ಸುತ್ತಲಿನ ಪ್ರದೇಶದಲ್ಲಿನ ಹವಾ ಗುಣಕ್ಕೆ ತಕ್ಕಂತೆ ಜೋಳ, ಹತ್ತಿ, ಶೇಂಗಾ ಹಾಗೂ ಭತ್ತ ಬೆಳೆಯಲಾಗುತ್ತಿದೆ. ಆದರೆ “ಹತ್ತಿ” ಬೆಳೆಯನ್ನು ಯಥೇಚ್ಛವಾಗಿ ಬೆಳೆಯುತ್ತಿದ್ದುದರಿಂದ ಹತ್ತಿ ನೂಲಿನ ಗಿರಣಿಗಳು ಮತ್ತು ಕೈಮಗ್ಗ ಕೇಂದ್ರಗಳು ಸ್ಥಾಪಿತಗೊಂಡಿರುತ್ತವೆ. ಕಾಲಕ್ರಮೇಣ ಅತ್ಯುನ್ನತ ಗುಣಮಟ್ಟದ ಹತ್ತಿ ಬಟ್ಟೆಯನ್ನು ತಯಾರಿಸುವ ಕಾರ್ಖಾನೆಗಳು ಪ್ರಾರಂಭಗೊಂಡು – ದಾವಣಗೆರೆಯಲ್ಲಿರುವ ಹತ್ತಿ ಕಾರ್ಖಾನೆಗಳಲ್ಲಿ ತಯಾರಾದ ಹತ್ತಿ ಬಟ್ಟೆಗಳಿಗೆ ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉನ್ನತ ಮಟ್ಟದ ಸ್ಥಾನ ಹೊರತು ದಾವಣಗೆರೆಯನ್ನು ಕರ್ನಾಟಕದ “ಮ್ಯಾಂಚೆಸ್ಟರ್ ಪಟ್ಟಣ” ವೆಂದು ಕರೆಯಲಾಯಿತು.
ದಾವಣಗೆರೆಯ ಪೂರ್ವಭಾಗದಲ್ಲಿ – ಚಿತ್ರದುರ್ಗ ಜಿಲ್ಲೆ; ಉತ್ತರಕ್ಕೆ – ಬಳ್ಳಾರಿ; ಪಶ್ಚಿಮಕ್ಕೆ – ಹಾವೇರಿ ಹಾಗೂ ದಕ್ಷಿಣ ಭಾಗದಲ್ಲಿ ಶಿವಮೊಗ್ಗ ಜಿಲ್ಲೆಗಳು ರಸ್ತೆ ಮತ್ತು ರೈಲು ಸಾರಿಗೆ ಸಂಪರ್ಕ ಹೊಂದಿರುತ್ತದೆ.